Pages

Friday 7 February 2014

ಬದುಕೆಂಬ ರಥದ ಸ್ವ-ಸಾರಥಿಗಳು...

ಕೊರಗರು ಮೂಲತಃ ಸ್ವಉದ್ಯೋಗಿಗಳು! ಕಾಡಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಬಿದಿರು - ಬಿಳಲುಗಳಿಂದ, ಬುಟ್ಟಿ ಮತ್ತಿತ್ತರ ಪರಿಕರಗಳನ್ನು ಮಾಡಿ, ಇತರರಿಗೆ ಮಾರಿ ಜೀವನ ಸಾಗಿಸುತ್ತದ್ದವರು. ಜೇನು ಮತ್ತು ವನಸ್ಪತಿಗಳು -ಆಹಾರದ ಮತ್ತು ಸ್ವಉದ್ಯೋಗದ ಮೂಲಗಳಾಗಿದ್ದವು. ಕಾಡಿನೊಳಗಿನ ಸ್ವಚ್ಛಂದ ಬದುಕು - ಜೀವನದ ಪಾಠವನ್ನು ಮತ್ತು ಸ್ವಉದ್ಯೋಗದ ನೆಲೆಯನ್ನು ಒದಗಿಸಿತ್ತು. ಕಾಡೆಂದರೆ ಬದುಕು, ಕಾಡೆಂದರೆ ನಾವು ಮತ್ತು ನಾವು ಕಾಡಿನ ಮಕ್ಕಳು ಎನ್ನುವುದೇ ಜೀವನದ ಸಿದ್ದಾಂತವಾಗಿತ್ತು.

ಕಾಲಚಕ್ರದ ಬದುಕಿನಲ್ಲಿ, ಬದಲಾವಣೆಯೆಂಬ ಗತಿಚಕ್ರವು ತಮಗರಿವಿಲ್ಲದಂತೆ ಪಥವನ್ನು ಬದಲಿಸಿದಾಗ, ಕೊರಗರು ಅನುಭೋಗದ ವಸ್ತುವಾಗಿಬಿಟ್ಟರು. ಅಜಲು ಪದ್ಧತಿಯೆಂಬ ದಾಸ್ಯದ ವ್ಯವಸ್ಥೆಯ ಸ್ಥಿತಿಗತಿಯೊಂದು ಕೊರಗರ ಸ್ವವಲಂಬನೆಯ ಬದುಕಿನ ಮೂಲ ಸೆಲೆಯನ್ನು ಕಸಿದುಬಿಟ್ಟತು. ಕೊರಗರು ಊರವರ ಚಾಕರಿಯನ್ನು ಕಡ್ಡಾಯವಾಗಿ ಮಾಡಬೇಕಾಯಿತು. ತಮ್ಮ ಸ್ವಉದ್ಯೋಗದ ಪರಿಕರಗಳಾದ ಬುಟ್ಟಿ ಮತ್ತಿತರ ವಸ್ತುಗಳನ್ನು, ಊರ ದನಿಗಳಿಗೆ ಉಚಿತವಾಗಿ ನೀಡಲೇಬೇಕಿತ್ತು. ಏಕೆಂದರೆ, ಅದು ಸೇವೆಯ ರೂಪದ ಊಳಿಗಮಾನ್ಯ ಎಂಬ ಕ್ರೂರ ವ್ಯವಸ್ಥೆಯಾಗಿತ್ತು. ಉಚಿತವಾಗಿ ಬುಟ್ಟಿ ಮತ್ತು ಕಾಡುಡ್ಪತ್ತಿಗಳನ್ನು ಕೊಡಬೇಕಾಗಿ ಬಂದಾಗ, ಹೊಟ್ಟೆಯ ಹಸಿವನ್ನು ನೀಗಿಸಲು - ಎಂಜಲನ್ನ ತಿನ್ನಬೇಕಾಗಿ ಬಂತು. ಕೊರಗರ ಸ್ವಉದ್ಯೋಗ ಕಣ್ಮರೆಯಾಗುತ್ತಾ, ದಾಸ್ಯದ ಬೇಗುದಿಯಲ್ಲಿ ಸಿಲುಕಬೇಕಾಯಿತು.

ಬದುಕು ನಿಂತ ನೀರಲ್ಲ! ಬದಲಾವಣೆಗಳಿಂದ ಕೂಡಿದ ಹರಿವ ನೀರಿನಂತೆ, ಸದಾ ತನ್ನ ಚಲನವಲನಗಳನ್ನು ಬದಲಿಸುತ್ತಾ, ವಿಸ್ತರಿಸುತ್ತಿರುತ್ತದೆ. ಕೊರಗರ 'ಬದಲಾವಣೆಯ ಹಿನ್ನಲೆ'ಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ..., ಪರಿವರ್ತನೆಯ ತಂಗಾಳಿ ಹಿತಾನುಭವದಂತೆ ಮೂಡತೊಡಗಿತು. ಸಂಘಟನೆ, ಶಿಕ್ಷಣ ಮತ್ತು ಕಲಿತುಕೊಂಡ ಬದುಕಿನ ಪಾಠ - ಹಲವಾರು ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಿತು. ಕೊರಗ ಬಂಧುಗಳು ಸಂಘಟನೆಯಿಂದಾಗಿ, ಸದಾ ಸಮುದಾಯದ ಹಿತಚಿಂತನೆಯನ್ನೇ ಮಾಡಲಾರಂಭಿಸಿದರು. ಸರಕಾರದೊಂದಿಗೆ ತಮ್ಮ ಹಕ್ಕುಗಳಿಗಾಗಿ ಮತ್ತು ಸ್ವಚ್ಛಂದ ಬದುಕಿಗಾಗಿ ಸೌಮ್ಯಸಂಘರ್ಷಕ್ಕಿಳಿದರು. 'ಅವಮಾನವೀಯ ಅಜಲು' ನಿಷೇದದಿಂದಗಿ ನಿಜವಾದ 'ಬದುಕಿನ ಸ್ವತಂತ್ರ್ಯ'ದ ಸವಿಯನ್ನು ಪಡೆದರು. ಆಶಾಜೀವಿಗಳಾಗಿ ಮತ್ತೆ ಸ್ವಉದ್ಯೋಗದ ಕನಸನ್ನು ಕಾಣಲಾರಂಭಿಸಿದರು.

ಕನಸು ಜೀವನದ ಪಥವನ್ನೇ ಬದಲಿಸುತ್ತದಂತೆ! ಹಿತಚಿಂತಕರ ಮಾತು, ಕೊರಗರ ಬದುಕಿನಲ್ಲಿಯೂ ಹಲವಾರು ಸ್ವಉದ್ಯೋಗಿ ಆಕಾಂಕ್ಷಿಗಳನ್ನು ಸೃಷ್ಠಿಸಿತು. ಕೊರಗರು ಪರರ ಸೇವೆ ಮಾಡುವವರಲ್ಲ, ಕೊರಗರೆಂದರೆ ಕೈಲಾಗದವರಲ್ಲ ಎಂಬುದನ್ನು ಸಾಧಿಸಲು ಮುಂದಾದರು. ಆ ಸಾಹಸಿಗರ ಸಾಲಿನಲ್ಲಿಂದು - ೨೦೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಮತ್ತು ಮಾಲಕರಿದ್ದಾರೆ. ಸ್ವಂತ ಲಾರಿ ಮತ್ತು ಕಾರುಗಳನ್ನು ಓಡಿಸುವವರಿದ್ದಾರೆ. ಟೈಲರ್ ಗಳಿದ್ದಾರೆ, ಡೋಬಿ ಅಂಗಡಿ ಮಾಲಕರಿದ್ದಾರೆ, ಮಲ್ಲಿಗೆ ಕೃಷಿಕರಿದ್ದಾರೆ, ಎಕರೆಗಟ್ಟಲೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡಿ 'ಪ್ರಗತಿಪರ ಕೃಷಿಕ' ಎಂದು ಬಿರುದನ್ನು ಪಡೆದವರೂ ಇದ್ದಾರೆ. ಅವರೆಲ್ಲರೂ - ತಾವು ಕೊರಗರು, 'ಕೊರಗುವುದು ನಮ್ಮ ಬದುಕಲ್ಲ' ಎನ್ನುವ ಸಂದೇಶವನ್ನು ಧನಿಕ ಮತ್ತು ಶೃಮಿಕ ವರ್ಗಕ್ಕೆ ಸಾರಿದವರು! ಬದುಕೆಂಬ ರಥದ ಸ್ವಸಾರಥಿಗಳಿವರು. ಕನಸು ಮತ್ತು ಕನಸು ನನಸು ಮಾಡುವ ಮನಸು - ಇವೆರಡರ ಫಲವೇ ಇದು! ಕನಸು ಸಾಕಾರಗೊಳಿಸಿದ ಆ ಸಧಕರಿಗಿದೋ ನನ್ನದೊಂದು ಪ್ರೀತಿಪೂರ್ವಕ ಅಕ್ಷರ ನಮನಗಳು...
- ಹೃದಯ

0 comments:

Post a Comment

 

Blogger news

Blogroll

About