Pages

Friday 24 January 2014

ಜಾನಪದ ಕುಣಿತಗಳಲ್ಲಿ ಕೊರಗರ ಉಪಸ್ಥಿತಿ! ಏನಿದರ ಒಳಮರ್ಮ?



ಜಾನಪದ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಸಂಪ್ರದಾಯ ಬದ್ಧ ಕೊಡುಗೆಗಳನ್ನು ನೀಡುತ್ತಾ ಬಂದಿರುವುದೇ ತಳಮಟ್ಟದ ಸಮುದಾಯಗಳು. ಇವರು ತಮ್ಮ ಪಾಡ್ದಾನ, ಕುಣಿತ ಮತ್ತು ವೇಷಭೂಷಣಗಳಿಂದ ಜನಪದ ಕುಣಿತಗಳ ಸಿರಿವಂತಿಕೆಯನ್ನು ಈಗಲೂ ಉಳಿಸಿಕೊಂಡು ಬ
ಂದಿದ್ದಾರೆ. ಈ ಸಾಂಸ್ಕೃತಿಕ ವೈಭವದ ಹುಟ್ಟಿಗೆ ಕಾರಣವೇ, ಅನಕ್ಷರಸ್ಥತನ. ಇಂಥಹ ಜನಮನ ಸೂರೆಗೊಂಡ ಜಾನಪದ ಸೊಗಡಿನಲ್ಲಿ ಕೊರಗ ಅಸ್ತಿತ್ವ ಹೇಗಿತ್ತು? ಎಂಬುದಕ್ಕೆ ಇಲ್ಲಿದೆ ನಿದರ್ಶನ.

ಬಾಲೆ ಸಾಂತು :
ತುಳುನಾಡಿನ ಮರಾಠಿ ನಾಯ್ಕರ ಆಚರಣಾತ್ಮಕ ಕುಣಿತಗಳಲ್ಲಿ ‘ಬಾಲೆ ಸಾಂತು’ ಕೂಡಾ ಒಂದು. ಬಂಟ್ವಾಳ, ಎಣ್ಮಕಜೆ, ಕೋಡಂದೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತಾದರೂ, ಇತ್ತೀಚೆಗೆ ಇದು ಎಲ್ಲೂ ಕಂಡು ಬಂದಿಲ್ಲ. ಈ ಒಂದು ಆಚರಣೆಯಲ್ಲಿ - ಪ್ರತ್ಯಕ್ಷವಾಗಿಯಲ್ಲದಿದ್ದರೂ, ಕೊರಗ ಜನಾಂಗದ ಉಪಸ್ಥಿತಿ ಇತ್ತು ಎಂದು ಡಾ.ಸ.ಚಿ. ರಮೇಶ್ ರವರ ‘ಕರ್ನಾಟಕದ ಜಾನಪದ ಆಚರಣೆಗಳು’ ಎನ್ನುವ ಪುಸ್ತಕದಿಂದ ತಿಳಿದು ಬರುತ್ತದೆ.
ಬಾಲೆ ಸಾಂತು ಕಲಾ ತಂಡದಲ್ಲಿ ಹನ್ನೊಂದು ಮಂದಿ ವೇಷಧಾರಿಗಳಿರುತ್ತಾರೆ. ಸನ್ಯಾಸಿ, ಅರ್ಚಕ(ಪೂಜೆ ಭಟ್ಟ), ಗುರಿಕಾರ, ಪೂಜಾರಿ( ದೈವ ನರ್ತಕ), ಕೊರಗ ಮತ್ತು ಕೊರಪೊಳು (ಕೊರಗ ಮಹಿಳೆ) ಸಾಹೇಬ ಮತ್ತು ಮಂಗ ಕುಣಿಸುವವ ಇತ್ಯಾದಿ. ಈ ವೇಷಧಾರಿಗಳು ಕಾಸರಕದ ಮರದಡಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಶಾರದಾಂಬೆಯನ್ನು ಸ್ಮರಿಸುತ್ತಾರೆ. ನಂತರ ಮನೆ - ಮನೆಗಳಿಗೆ ತೆರಳಿ, ಮರಾಠಿ ಭಾಷೆಯ ಹಾಡು ಹಾಡುತ್ತಾ... ‘ಶೃಂಗೇರಿಚೆ ಶಿಷ್ಯರಮಿ ಬಾಲ್ಚಾಲ್ಯೊ ಬಾಲೆ ಸಾಂತು, ಕಾಟ್ಮರೊ ಜೋಗಿರಮಿ ಬಾಲ್ ಬಾಲ್ಯೊ ಬಾಲೆ ಸಾಂತು’ ಎಂದು ಗುರಿಕಾರ ಹಾಡುತ್ತಿದ್ದಂತೆ - ಇತರ ಕಲಾವಿದರು ‘ಬಾಲ್ ಬಾಲೋ ಬಾಲ್ ಸಾಂತು’ ಎಂದು ಸೊಲ್ಲನ್ನು ಹಾಡುತ್ತಾ ಕುಣಿಯುತ್ತಾರೆ. ಬಾಲೆ ಸಾಂತು ಆಚರಣೆಯಿಂದ ಊರಿನ ಅನಿಷ್ಟ ದೂರವಾಗುತ್ತದೆ ಎಂದು ನಂಬುತ್ತಾರೆ.

ಚೆನ್ನು ಕುಣಿತ :
ಈ ಜನಪದ ನೃತ್ಯ ಪ್ರಕಾರವನ್ನು ‘ಕೋಪಾಲ’ (ನಲಿಕೆ) ಜನಾಂಗದವರು ಆಚರಿಸಿಕೊಂಡು ಬರುತ್ತಾರೆ. ಬೆಳ್ತಂಗಡಿ ಪ್ರಾಂತ್ಯದಲ್ಲಿ ಈ ವೇಷ ಹೆಚ್ಚಾಗಿ ಕಂಡು ಬರುತ್ತದೆ. ಕೋಪಾಲ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ - ‘ಚೆನ್ನು’ ವಿನ ಕುರಿತಾಗಿ ಆರಾಧಿಸಿ ನಲಿವ ನೃತ್ಯ ಪ್ರಕಾರವಿದು. ಈ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುವುದು ವಿಶೇಷ!

ಕಂಗೀಲು ಕುಣಿತ :
ಇದು ಕರಾವಳಿ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಆರಾಧನಾ ಪದ್ಧತಿಯ ಪೂಜಾ ಕುಣಿತ. ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ , ಮೂರು ದಿನ ರಾತ್ರಿ ಮತ್ತು ಮೂರು ದಿನ ಹಗಲು - ಗೊಡ್ಡ ಜನಾಂಗದವರಿಂದ ನಡೆಸಿಕೊಂಡು ಬರುವ ವಿಶಿಷ್ಟ ಕುಣಿತ. ಪುರುಷ ಪ್ರಧಾನವಾದ ಈ ಕುಣಿತದಲ್ಲಿ - ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾನವಾಗಿ ತೆಂಗಿನ ಸಿರಿಯನ್ನು ಕಟ್ಟಿಕೊಂಡು ಡೋಲು - ಚೆಂಡೆಯ ನಾದಕ್ಕೆ ತಕ್ಕುದಾಗಿ ಕುಣಿಯುತ್ತಾರೆ. ಇದರಲ್ಲಿ ‘ನಾಗಿ’ ಎನ್ನುವ ‘ಕೊರಗ ವೇಷ’ವೂ ಇರುತ್ತದೆ. ಈತನ ಸುತ್ತ ಇತರ ವೇಷಧಾರಿಗಳು ಕುಣಿಯುತ್ತಾರೆ. ಈ (ಕೊರಗ)ವೇಷ ಮನೆಯ ಹಿಂಬಾಗದಲ್ಲಿ ಹೋಗಿ ದಾನ ಪಡೆಯುವುದು ಮತ್ತು ಭಕ್ತಾದಿಗಳಿಗೆ ತನ್ನ ಹಣೆಯಲ್ಲಿನ ಕಪ್ಪು ಮಸಿ (ಕರಿಗಂಧ -- ಕೊರಗ ತನಿಯನ ಆರಾಧಕರು ಹಾಕುವುದು ಕೂಡಾ ಕರಿಗಂಧವನ್ನೇ!) ಯನ್ನು ಭಕ್ತಾಧಿಗಳ ಹಣೆಗೆ ಸೋಕಿಸುವುದು (ಸ್ಪರ್ಶಿಸುವುದಿಲ್ಲ!) ಕಂಗೀಲು ಆರಾಧನಾ ಪದ್ಧತಿಯ ವಿಶೇಷ!

ಇಲ್ಲಿ ಗಂಭೀರವಾದ ಪ್ರಶ್ನೆ ಎಂದರೆ, ಈ ಎಲ್ಲಾ ಜನಪದ ಪ್ರಕಾರಗಳ ಕುಣಿತಗಳಲ್ಲಿ ‘ಕೊರಗ’ರ ಮಧ್ಯಸ್ತಿಕೆ ಹೇಗೆ ಬಂದಿರಬಹುದು? ಏನು ಕಾರಣವಿರಬಹುದು? ಏನಿದರ ಒಳಮರ್ಮ? ಇತರ ತಳಮಟ್ಟದ ಸಮುದಾಯಗಳಿಗೂ, ಆದಿವಾಸಿ ಪಂಗಡದ ‘ಕೊರಗ’ ಜನರಿಗೂ ಏನಾದರೂ ‘ಸಾಂಸ್ಕೃತಿಕ - ಸಂಬಂಧ’ವಿರಬಹುದೇ? ಕೊರಗರ ವೇಷಗಳನ್ನು ಹಾಕುವುದು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸುವುದು ‘ಅಜಲು ನಿಷೇಧ ಕಾಯಿದೆ’ಯ ಉಲ್ಲಂಘನೆಯಾಗುತ್ತದೆ. ಹೀಗಿರುವಾಗ - ಚೆನ್ನು ಕುಣಿತ, ಬಾಲೆ ಸಾಂತು ಮತ್ತು ಕಂಗೀಲು ನೃತ್ಯಗಳು - ಕಾಯಿದೆಯನ್ನು ಉಲ್ಲಂಘಿಸಿದಂತಾಗುವುದಿಲ್ಲವೇ? ಕೋಲ ನೃತ್ಯಗಳನ್ನು ಸಾರ್ವಜನಿಕ ರಂಗಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ. ಆದರೆ - ಇದೇ ರಂಗಕರ್ಮಿಗಳು (ದೈವನರ್ತಕರು) ‘ ಕೊರಗ ವೇಷ’ವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧವಾಗುವುದಿಲ್ಲವೇ? ಕೊರಗ ಅಭಿವೃದ್ಧಿ ಸಂಘಟನೆಗಳು ಮತ್ತು ಜಾನಪದ ವಿಶ್ಲೇಷಕರು ಏನೆನ್ನುತ್ತಾರೆ.


- ಜಿ. ಭವಾನಿ ಶಂಕರ ಕೊರಗ, ಬೆಳುವಾಯಿ

0 comments:

Post a Comment

 

Blogger news

Blogroll

About