skip to main |
skip to sidebar
ಕೊರಗರ ಕೂಡು ಕಟ್ಟಿನಲ್ಲಿ ಅವರದೇ ಆದ ಕಟ್ಟುಕಟ್ಟಳೆಗಳು (ಸಂಪ್ರದಾಯ) ಇದೆ. ಅವುಗಳಲ್ಲಿ ಸತ್ಕಾರ ಮತ್ತು ಉಪಚಾರವೂ ಒಂದು. ಮನೆಗೆ ಬಂದ ನೆಂಟರು ಅಥವಾ ಬೀಗರನ್ನು ಬರಮಾಡಿ ಕೊಳ್ಳುವುದು ಹಾಗೂ ಕ್ಷೇಮ ಸಮಚಾರಗಳನ್ನು ವಿಚಾರಿಸುವುದರಲ್ಲಿ ವಿಶಿಷ್ಟತೆ ಇದೆ.
ಮನೆಯ ಅಂಗಳಕ್ಕೆ ಕಾಲಿಡುವಾಗಲೇ ಬಂದ ನೆಂಟರಿಷ್ಟರು... 'ಬಿನ್ನೆರ್ ಬತ್ತೆರ್...' ಎಂದು ನಗು ಗಾಂಭೀರ್ಯದ ಮಾತಿನಿಂದ ಪ್ರವೇಶ ಕೇಳಿದಾಗ, 'ಬಲೆ ಬಲೆ ಜಾಲ್ಗೆ ಬಲೆ...' ಎಂದು ಅನುಮತಿ ನೀಡಿ, ಮೊದಲು ಅವರಿಗೆ ಕಾಲು ತೊಳೆಯಲು ಒಂದು ತಂಬಿಗೆ ನೀರು ಕೊಟ್ಟ - ಕೂರಲು ಮಣೆಯೋ ಚಾಪೆಯೋ ಹಾಸಿ ದಣಿವು ತಗ್ಗಿಸುವಂತೆ ಮತ್ತು ದಾಹ ತೀರಿಸಲು ನೀರು ಕೊಡುವುದು ವಾಡಿಕೆ.
ಮುಂದುವರಿದು... 'ನೀವು ಮತ್ತು ಮನೆಯವರು ಹೇಗಿದ್ದಾರೆ..? ಚೆನ್ನಾಗಿದ್ದಾರ..?' ಎಂದು ಕ್ಷೇಮ ಸಮಚಾರ ಕೇಳುತ್ತಾರೆ ಮನೆಯವರು. ಅದಕ್ಕವರು.., 'ನಿಮ್ಮ ಮತ್ತು ನಮ್ಮ ಹಿರಿಯರ ದಯೆಯಿಂದ ಸೌಖ್ಯ'ವೆಂದು ಹೇಳುತ್ತಾರೆ. ಪರಸ್ಪರ ಕೈಮುಗಿದು ನಮಸ್ಕಾರ ಸಲ್ಲಿಸುತ್ತಾರೆ. ಕೂಡಲೆ ವೀಳ್ಯದೆಲೆ ವಿನಿಮಯವೂ ನಡೆದು ಬಾಯಿ ಕೆಂಪಾಗುತ್ತದೆ.
ದನದ ಮಾಂಸ (ಒಣಗಿದ ಮಾಂಸ ಯಾ ಹಸಿ ಮಾಂಸ)ದ ಪದಾರ್ಥದೊಂದಿಗೆ ಊಟಕ್ಕೆ ಸಜ್ಜಾಗುತ್ತಾರೆ.
ಇಂಥ ಕೆಲವು ಸನ್ನಿವೇಶಗಳು ನೋಡಲು - ಅನುಭವಿಸಲು ಈ ಕಾಲದಲ್ಲಿ ಮತ್ತು ಇನ್ನು ಮುಂದಿನ ಕಾಲದಲ್ಲಿ ಸಾಧ್ಯವಿಲ್ಲ! ಕನಸು ಕಾಣಬಹುದಷ್ಟೇ! ಅಥವಾ ಕಳೆದು ಹೋದ ಆ ದಿನಗಳನ್ನು ನೆನಪು ಮಾಡಬಸಹುದಷ್ಟೇ! ಎಚ್ಚಿ ರನ್ನೆರ್..?(ಹೇಗಿದ್ದೀರ?) ಸಜ್ಜಿ ರನ್ನೆರ...?! (ಚೆನ್ನಾಗಿದ್ದೀರಾ?)
- ಹೃದಯ
ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದವರು ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಚದುರಿ ಹೋಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದ ಈಗಿರುವ ಒಟ್ಟು ಜನಸಂಖ್ಯೆ ಬರೇ ಹದಿನಾರು ಸಾವಿರ ಎಂದು ಸಮಗ್ರ ಗ್ರಾಮೀಣ ಆಶ್ರಮ(ರಿ)ದ ಕಾರ್ಯಕರ್ತರೊಬ್ಬರು ಬೊಟ್ಟು ಮಾಡಿ ಖೇದ ವ್ಯಕ್ತಪಡಿಸುತ್ತಾರೆ. ಅಂದರೆ, ಒಟ್ಟು ಶೇಕಡವಾರು ಸಂಖ್ಯೆಯ ಮುಂದೆ ಕೊರಗ ಜನಾಂಗದ ಜನಸಂಖ್ಯೆಯು ಮೈನಸ್ ಪಾಯಿಂಟ್ ಗೆ ತಲುಪಿದೆ. ಒಟ್ಟಾರೆ ತಮ್ಮ ಜನಾಂಗದ ಉಳಿವಿಗಾಗಿಯೇ ಕೊರಗ ಸಮುದಾಯವು ಹೋರಾಡುವ ನಿರ್ಗತಿಕ ಸ್ಥಿತಿಯೊಂದು ಉದ್ಭವವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ (ಬ್ರಿಟಿಷ್ ಆಡಳಿತದ ದಾಖಲೆಗಳ ಪ್ರಕಾರ) ಆಗಿನ ಕೊರಗರ ಒಟ್ಟು ಜನಸಂಖ್ಯೆ 55,000 ಆಗಿತ್ತು ಸ್ವಾತಂತ್ರ್ಯ ನಂತರ ಭಾರತ ಸರಕಾರ ನಡೆಸಿದ ಜನಗಣತಿಯಲ್ಲಿ ಕೊರಗ ಸಮುದಾಯದ ಜನಸಂಖ್ಯೆಯು 35,000 ಸಾವಿರಎಂದು ತಿಳಿದುಬಂದಿತ್ತು. ಕೊರಗರ ಜನಸಂಖ್ಯೆಯ ಅನುಪಾತ ಕುಸಿತವನ್ನು 1992ರಲ್ಲಿ ಮನಗಾಣಿಸಲಾಗಿತ್ತು. ಆ ಸಮಯದಲ್ಲಿ ನಡೆಸಿದ ಜನಸಂಖ್ಯಾ ಸಮೀಕ್ಷೆಯಲ್ಲಿ ಕೊರಗರ ಜನಸಂಖ್ಯೆ22,000ಕ್ಕೆ ಕುಸಿದಿತ್ತು. 2004ರಲ್ಲಿ ಇನ್ನಷ್ಟು ಕುಸಿತ ಕಂಡು ಕೊರಗರ ಜನಸಂಖ್ಯೆ 18,000ಕ್ಕೆ ಇಳಿದಿತ್ತು ಎಂಬುದನ್ನು ಕೊರಗ ಸಮುದಾಯದ ಹಿರಿಯ ಮುಖಂಡರೊಬ್ಬರು ಅಂಕಿಅಂಶಗಳನ್ನು ತೆರೆದಿಡುತ್ತಾರೆ. ಒಟ್ಟಾರೆ ಕಳೆದ 60 ವರ್ಷಗಳಲ್ಲಿ ಕೊರಗ ಸಮುದಾಯವು ಗಂಭೀರ ವಿನಾಶದೆಡೆಗೆ ಸಾಗಿದೆ.
ಎಂಜಲನ್ನದ ಪ್ರಭಾವವೇ..?
ಅನಿಷ್ಠ ಅಜಲು ಚಾಕರಿಗೆ ಒಳಪಟ್ಟ ಈ ಸಮುದಾಯವು ಗಂಭೀರವಾಗಿ ಅಜಲುವಿನ ದುಷ್ಪರಿಣಾಮವನ್ನು ಈಗಲೂ ಎದುರಿಸುತ್ತಿದೆ. ಶತಮಾನಕ್ಕೂ ಹಿಂದೆ, ಊರಚಾಕರಿ(ಸೇವೆ)ಗಳಿಗೆ ಒಳಪಟ್ಟು, ಸಮಾಜದ ಮುಂದೆ ಹೊಟ್ಟೆ ಪಾಡಿಗಾಗಿ ಕೈಯೊಡ್ಡಬೇಕಾಗಿ ಬಂದಾಗ, ಮೇಲ್ವರ್ಗದ ಸಮುದಾಯ ಬಿಸಾಕಿದ ಎಂಜಲನ್ನವೇ (ಅದನ್ನೇ ತಿಂದು ಬದುಕಬೇಕಾಗಿ ಬಂದ ನಿಕೃಷ್ಠ ಸ್ಥಿತಿ) ಇಂದು ಮಾರಕವಾಗಿ ಪರಿಣಮಿಸಿತೇ? ಸ್ವಾತಂತ್ರ್ಯಪೂರ್ವದಲ್ಲಿ ಆಹಾರದ ಕೊರತೆ ಮತ್ತು ಆಹಾರ ಉತ್ಪಾದನೆಗೆ ಅವಕಾಶವಿಲ್ಲದಿದ್ದಾಗ ಹಸಿವೆಗಾಗಿ ಎಂಜಲನ್ನದ ಭಿಕ್ಷೆ ಮತ್ತು ಅಮಲು ಪದಾರ್ಥಗಳನ್ನು ದಾನವಾಗಿ ಪಡೆದ ದುಶ್ಪರಿಣಾಮವನ್ನು ಇಂದು ಕೊರಗ ಸಮುದಾಯದ ಆರೋಗ್ಯದ ಮೇಲೆ ವಿಪರೀತ ವಂಶವಾಹಿನಿಯಾಗಿ ಪರಿಣಾಮವನ್ನು ಬೀರಿದೆ. ಎಂಜಲನ್ನ ಮುಖಾಂತರ ರೋಗ- ರುಜಿನಗಳನ್ನು ಪಡೆದ ಪರಿಣಾಮ, ಇಂದು ಕೊರಗ ಜನಾಂಗದ ತಲೆಮಾರಿನ ವಂಶಾಭಿವೃದ್ಧಿಯನ್ನು ಕುಂಠಿತಗೊಳಿಸಿದೆ.
ಅನಾರೋಗ್ಯ ಮತ್ತು ದುಃಶ್ಚಟ
ಅಜಲಿನ ಪ್ರಭಾವದಿಂದ, ವಂಶವಾಹಿನಿಯಾಗಿ ಬಂದ ರೋಗಗಳು ( ಅನುವಂಶಿಕ ತೊಂದರೆಗಳು), ರಕ್ತಹೀನತೆ, ಪೋಷಕಾಂಶಗಳ ಕೊರತೆ, ಅಪೌಷ್ಠಿಕ ಆಹಾರ ಮತ್ತು ಅಮಲು ಸೇವನೆಯಂತಹ ದುಃಶ್ಚಟದಿಂದಾಗಿ ಹಾಗು ಗರ್ಭಿಣಿ ಮಹಿಳೆಯರ ಹಾರೈಕೆಯಲ್ಲಿ ಹಿನ್ನಡೆ ಮುಂತಾದ ಕಾರಣಗಳಿಂದಾಗಿಯೂ ಕೊರಗ ಜನಾಂಗದ ವಂಶಾಭಿವೃದ್ಧಿಯನ್ನು ಕುಂಠಿತಗೊಳಿಸಿದೆ. ಸಮಗ್ರ ಗಿರಿಜನ ಕಲ್ಯಾಣಾಭಿವೃದ್ಧಿ(ಐಟಿಡಿಪಿ) ಪೌಷ್ಠಿಕ ಆಹಾರದ ಪ್ಯಾಕೇಜ್ ಗಳನ್ನು (ಮಳೆಗಾಲದಲ್ಲಿ ಮಾತ್ರ!) ವಿತರಿಸುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ. ಕೊರಗರ ಕಾಲೋನಿಯ ಅನೈರ್ಮಲ್ಯ ಪರಿಸರವೂ ಅನಾರೋಗ್ಯಗಳಿಗೆ ಕಾರಣವಾಗಿದೆ. ಅದ್ದರಿಂದಲೇ ಕೊರಗರು ಅಲ್ಪಾಯುಷಿಗಳಾಗಿದ್ದಾರೆ.
ಮತಾಂತರ ಪ್ರಕ್ರಿಯೆಯೂ ಕೊರಗ ಸಮುದಾಯಕ್ಕೆ ಒಂದು ಶಾಪವಾಗಿ ಪರಿಣಮಿಸಿದೆ. ಕ್ಷಯ, ಮಲೇರಿಯಾ, ಪೈಲೇರಿಯಾ, ಕ್ಯಾನ್ಸರ್ ಮುಂತಾದ ಸಾಂಕ್ರಾಮಿಕ ರೋಗಗಳ ಹಾಗು ಹೃದಯ ಸಂಬಂಧಿ ತೊಂದರೆಗಳೂ ಸಮುದಾಯದಲ್ಲಿ ಗಂಭೀರವಾಗಿ ಕಾಡುತ್ತಿದೆ.
ಭೀತಿ ಹಿಟ್ಟಿಸುವ ಸಾವಿನ ಸಂಖ್ಯೆ
ಕೊರಗ ಜನಾಂಗದಲ್ಲಿ ಜನನ ಸಂಖ್ಯೆಗಿಂತಲೂ, ಮರಣ ಹೊಂದುವವರ ಸಂಖ್ಯೆಯೇ ಅಧಿಕವಾಗಿದೆ. ಕಳೆದ ವರ್ಷವೊಂದರಲ್ಲೇ 120ಕ್ಕೂ ಹೆಚ್ಚು ಮಂದಿ ಕೊರಗ ಜನಾಂಗದ ಬಂಧುಗಳು ಸಾವನಪ್ಪಿದ್ದರು. ಇವರೆಲ್ಲರೂ 25ವರ್ಷದಿಂದ 40 ವರ್ಷದೊಳಗಿನವರು ಎಂಬುದು ಇನ್ನೂ ಆಘಾತಕಾರಿ ವಿಷಯ. ಹೀಗೆಯೇ ಮುಂದುವರಿದರೆ, ಮುಂದಿನ 100 ವರ್ಷದಲ್ಲಿ ಕೊರಗ ಜನಾಂಗ ಸಂಪೂರ್ಣ ನಾಶವಾಗಬಹುದೆಂಬ ಬೀತಿ ವ್ಯಕ್ತವಾಗುತ್ತಿದೆ.
ಬಲಿಷ್ಠ ಸಂಘಟನೆ ಮತ್ತು ಕಿವುಡರ ಸರಕಾರ!
ಜಾತಿವಾರು ಸಂಘಟನೆಗಳಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಬಲಿಷ್ಥವಾಗಿದ್ದು, ಸದಾ ಕೊರಗರ ಅಭಿವೃದ್ಧಿ ಪರ ಕೆಲಸಗಳಲ್ಲಿ ಕಾರ್ಯೋನ್ಮುಖವಾಗಿ ಸೇವೆ ಸಲ್ಲಿಸುತ್ತಿದೆ. ಕೊರಗರ ಸಮಗ್ರ ಸಮೀಕ್ಷೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ, ಕಿವುಡರಂತೆ ವರ್ತಿಸುವ ಸರಕಾರದ ಮುಂದೆ ಸಂಘಟನೆಗಳ ಧ್ವನಿಯೂ ಕ್ಷೀಣಿಸಿದಂತೆ ಕಾಣುತ್ತಿದೆ!
ಪರಿಹಾರವೇನು?
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿಲ್ಲವೇ? ಸಮಸ್ಯೆಗಳ ಮೂಲವನ್ನು ಕಂಡೂ ಹಿಡಿಯಲು ಸರಕಾರಗಳಿಗೆ ಮನಸ್ಸಿಲ್ಲವೇ? ದಕ್ಷಿಣ ಆಪ್ರಿಕಾದ ಬುಡಕಟ್ಟು ಪಂಗಡವೊಂದನ್ನು ನಾಶದಂಚಿನಿಂದ ಕಾಪಾಡಲು, ಅಲ್ಲಿನ ಸ್ಥಳೀಯ ಸರಕಾರ, ಜಿನ್ (ವಂಶವಾಹಿನಿ)ಗೆ ಸಂಬಂಧಪಟ್ಟ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿದೆ. ಇಲ್ಲಿಯೂ ಅದೇ ಮಾದರಿಯ ಪರಿಹಾರ ಮಾರ್ಗವನ್ನು ರೂಪಿಸಲು ಸರಕಾರಗಳಿಗೆ ಸಾದ್ಯವಿಲ್ಲವೇ? ಅಥವಾ ಕೊರಗ ಸಮುದಾಯ, ಅಂಡಮಾನಿನ ಶಾಂಪೆನ್ಸ್ ಸಮುದಾಯದಂತೆ ಸರ್ವನಾಶವಾಗಲಿ ಎಂದು ಕಾಯುತ್ತಿದೆಯೇ? ಅಜಲು ನಿಷೇಧ ಜಾರಿಗೊಂಡರೂ, ತೆರೆಮರೆಯಲ್ಲಿ ಅಜಲು ಚಾಕರಿ ಇನ್ನೂ ನಡೆಯುತ್ತಿದೆ ಎಂಬುದನ್ನು ದಾಖಲೆ ಸಮೇತ ಜಿಲ್ಲಾಡಳಿತದ ಮುಂದಿಟ್ಟರೂ, ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಕೊರಗರಿಗೆ ಕೊರಗುವುದೇ ಬದುಕಾಯಿತೇ...?
- ಹೃದಯ
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ನಿದಾನವಾಗಿಯಾದರೂ ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಎನ್ನಬಹುದಾದ ಸಾಧನೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಬಿತಾ ಗುಂಡ್ಮಿ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಗುಂಡ್ಮಿ ಎಂಬಲ್ಲಿ ಜನಿಸಿದ ಸಬಿತಾ, ಬಾಲ್ಯದಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡ ತಬ್ಬಲಿ. ಆದರೆ, ತನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪನ ಆಸರೆಯಲ್ಲಿ - ಪ್ರೀತಿಯ ಹಾರೈಕೆಯಲ್ಲಿ ಬೆಳೆದ ಸಬಿತಾ, ಬ್ರಹ್ಮಾವರದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ಉಡುಪಿ ಜಿಲ್ಲೆಯ ಮಂಚಕಲ್ ಪೆರ್ನಾಲಿನ ಸಮಗ್ರ ಗ್ರಾಮೀಣ ಆಶ್ರಮ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಜೊತೆಗೆ ಕೆಲಸ ಮಾಡಿಕೊಂಡ ಸಬಿತಾ ತಾನೂ ಕಲಿಯಬೇಕೆಂಬ ಕನಸು ಕಂಡವರು. ಅವರ ಆಕಾಂಕ್ಷೆಗೆ ಸಮಗ್ರ ಗ್ರಾಮೀಣ ಆಶ್ರಮ ಬೆಂಬಲವಾಗಿ ನಿಂತಿತು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ ಸಬಿತಾ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಸ್ಲೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗುವ ಮೂಲಕ ಕೊರಗ ಸಮುದಾಯದ ಪ್ರಪ್ರಥಮ ಯುಜಿಸಿ ತೇರ್ಗಡೆಗೊಂಡ ಸಾಧಕಿಯೆಂಬ ಕೀರ್ತಿಗೆ ಪಾತ್ರರಾದರು. ಆ ಮೂಲಕ ಒಟ್ಟು ಸಮಾಜ ಕೊರಗ ಬುಡಕಟ್ಟು ಸಮುದಾಯವನ್ನು ಶೈಕ್ಷಣಿಕ ರಂಗದಲ್ಲಿಯೂ ಕಾಣುವಂತಾಯಿತು. ಅಭಿನಂದನೆಗಳು ಸಬಿತಾ...
- ಹೃದಯ