skip to main |
skip to sidebar
ಇದು ಮತ್ತೊಂದು ಸಂತೋಷದ ವಿಷಯ! ದೈಹಿಕವಾಗಿ ಮತ್ತು ಮಾನಸಿಕವಾಗಿ 'ಅಜಲು' ಎಂಬ ಅನಿಷ್ಠ ಮತ್ತು ನಿಷೇದಿತ 'ಬಿಟ್ಟಿ ಚಾಕರಿ' (ಉಚಿತ ಸೇವೆ)ಗೆ ಒಳಪಟ್ಟ ಕೊರಗ ಆದಿವಾಸಿ ಸಮುದಾಯ, ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ - ತಾವೂ ಕೂಡ ಏನನ್ನಾದರೂ ಸಾಧಿಸಬಲ್ಲೆವು ಮತ್ತು ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ!
ಬುಟ್ಟಿ ಹೆಣೆಯುವ, ಡೋಲು ಬಡಿಯುವ, ಸಮಾಜದಲ್ಲಿ ತೀರಾ ಕೆಳಮಟ್ಟಕ್ಕೆ ದೂಡಲ್ಪಟ್ಟ ಕೊರಗ ಸಮುದಾಯದ ಹಿರಿಯ ಜೀವಿಗಳು - ತಮ್ಮ ಮಕ್ಕಳು ಯಾವತ್ತೂ ಈ ರೀತಿಯಲ್ಲಿ ಬದುಕಬಾರದೆಂದು ಆಶಿಸಿದವರೇ.
ಅಂತಹುದೇ ಆಸೆ - ಆಕಾಂಕ್ಷೆಗಳನ್ನು ಹೊತ್ತ ಹಿರಿ ಜೀವವೇ ಸುಕ್ರ ಕೊರಗ. ಉಡುಪಿ ಜಿಲ್ಲೆಯ ಕೆಂಜೂರಿನ ಸುಕ್ರ ಕೊರಗ ಎಂಬವರ ಹಿರಿಯ ಮಗ ದೈಹಿಕ ಅನಾನುಕೂಲತೆಗೆ ಒಳಗಾದರೂ ಅವನನ್ನು ಶೇಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದವರು. ಈಗ ಅವರ ಎರಡನೇ ಪುತ್ರನ ಸರದಿ! ಅಣ್ಣ ದಿನಕರ ಕೆಂಜೂರಿನಂತೆ ತಮ್ಮ ದಿನೇಶ್ ಕೂಡ ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕೋಲೇಜ್ನಲ್ಲಿ ಬಿಎಸ್ಡಬ್ಲ್ಯು ಮಾಡಿದ ದಿನೇಶ್, ಮಂಗಳೂರು ವಿವಿಯಲ್ಲಿ ಎಂಎಸ್ಡಬ್ಲ್ಯು ಮುಗಿಸಿ ಯುಜಿಸಿ - ನೆಟ್ ಲೆಕ್ಚರರ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಕೊರಗ ಸಮುದಾಯದಿಂದ ಯುಜಿಸಿ ಪಾಸಾದ ಎರಡನೇ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ.
ಅಪ್ಪನಿಗೆ ಅಕ್ಷರದ ಅರಿವಿಲ್ಲದಿದ್ದರೂ, ತಮ್ಮಿಬ್ಬರು ಮಕ್ಕಳು 'ಅಕ್ಷರದ ಬೆಳಕಾಗುವ' ಮಟ್ಟಕ್ಕೆ ಬೆಳೆಸಿದ್ದಾರೆ. ತಂದೆ ಮಕ್ಕಳಿಗೆ ನಮ್ಮನಿಮ್ಮೆಲ್ಲರ ಪರವಾಗಿ ಪ್ರೀತಿಯ ವಂದನೆ... ಅಭಿನಂದನೆಗಳು...
- ಹೃದಯ
ಇವರ ಹೆಸರು ದಿನಕರ ಕೆಂಜೂರು. ಉಡುಪಿ ಜಿಲ್ಲೆಯ ಕೆಂಜೂರಿನ ಕಲ್ಲುಗುಡ್ಡೆಯ ಸುಕ್ರ ಕೊರಗ ಮತ್ತು ಶಾಂತ ದಂಪತಿಯ ಮಕ್ಕಳಲ್ಲಿ ಒಬ್ಬರಾದ ದಿನಕರ ಕೊರಗ ಹುಟ್ಟುತ್ತಲೇ ಪೋಲಿಯೋ ಎಂಬ ಮಹಾಮಾರಿಗೆ ಒಳಗಾದರು. ಹುಟ್ಟು ಬಡತನ, ಕೌಟುಂಬಿಕ ಅನಕ್ಷರತೆ ಮತ್ತು ತನಗೆ ಸವಾಲೆನಿಸಿದ ಪೋಲಿಯೋ ಪೀಡಿತ ಭಿನ್ನ ದೇಹಾಕೃತಿಯನ್ನು ಮೆಟ್ಟಿ ನಿಲ್ಲುತ್ತಲೇ, ಸಾಧನೆಯ ಹಾದಿಯಲ್ಲಿ ಛಲದಂಕಮಲ್ಲನೆನೆಸಿಕೊಂಡವರು.
ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡರೂ ತಮ್ಮ ತಂದೆ, ಇಬ್ಬರು ತಮ್ಮಂದಿರು ಮತ್ತು ಓರ್ವ ತಂಗಿ ಹಾಗೂ 'ಊರುಗೋಲೆಂಬ ಜೀವ ಮಿತ್ರ'ನ ಸಹಾಯದಿಂದಲೇ ಉಡುಪಿ ಜಿಲ್ಲೆಯ ಶ್ರೀ ವೀರೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಆರಂಭಿಸಿದರು. ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ಶಿರ್ವದ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಾಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೇರ್ಪಡೆಗೊಂಡ ಇವರು ಎಂ.ಕಾಂ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡರು.
2009ರಲ್ಲಿ ಮಂಗಳೂರು ವಿವಿ ವಾಣಿಜ್ಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಸಾಧಿಸುವ ಛಲದ ಮುಂದೆ ಮಹಾಮಾರಿಯೊಂದು ಅಸಹಾಯಕ ಸ್ಥಿತಿಗೆ ತಲುಪಿದ ಸ್ವಾರಸ್ಯವಿದು!!
ದಿನಕರ ಕೆಂಜೂರು - ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಮತ್ತು ಕೇರಳ ಇದರ ಸಕ್ರೀಯ ಸದಸ್ಯರಾಗಿರುತ್ತಾರೆ. ಇವರನ್ನು ಸಂಪರ್ಕಿಸಬಯಸುವವರು M:94492 81350 ಕರೆ ಮಾಡಬಹುದು.
- ಹೃದಯ
ಶ್ರೇಷ್ಠ ಭಾಷಾತಜ್ಙ, ಸಂಶೋಧಕ ಹಾಗು ಮಾನವತವಾದಿ ಎಂದು ಹೆಗ್ಗಳಿಕೆಗೆ ಪಾತ್ರರಾಗಿರುವ - ಡಾ.ಡಿ.ಎನ್. ಶಂಕರ ಭಟ್ಟರು, ಕೊರಗ ಭಾಷೆಯ ಕುರಿತಾಗಿ ಆಳವಾದ ಅಧ್ಯಯನ ನಡೆಸಿದವರಲ್ಲಿ ಪ್ರಮುಖರಾಗಿದ್ದಾರೆ.
ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು ಮುಂತಾದ ಅಧ್ಯಯನಶೀಲ ಸಂಶೋಧನೆ ಹಾಗು ತುಳು, ಬೋಡೊ, ಥಂಕರ್, ನಾಗಾ, ಹವ್ಯಕ್ ಮುಂತಾದ ಪ್ರಾದೇಶಿಕ ಮತ್ತು ಬುಡಕಟ್ಟು ಭಾಷೆಗಳ ಕುರಿತಾಗಿಯೂ ಅಧ್ಯಯನ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ - 'ದರ್ಬೆ ನಾರಾಯಣ ಶಂಕರ ಭಟ್ಟ' (D.N.S.BHAT)ರು 15 ಜುಲೈ 1935ರಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು - ಸಂಸ್ಕ್ರತ ವೇದ ಪಂಡಿತರು.
1962ರಲ್ಲಿ ಮದ್ರಾಸು ವಿವಿಯಲ್ಲಿ ಭಾಷಾಶಾಸ್ತ್ರದಲ್ಲಿ ಪಿ.ಹೆಚ್.ಡಿ ಗಳಿಸಿದ ಡಿ.ಎನ್.ಶಂಕರ ಭಟ್ಟರು, 1966ರಲ್ಲಿ ಬ್ರಿಟೀಷ್ ಕೌನ್ಸಿಲ್ ನಲ್ಲಿ 'ಪೆಲೋಶಿಪ್' ಆಯ್ಕೆಯಾಗಿ ಇಂಗ್ಲೀಷ್ನಲ್ಲಿ 'ಉಪಭಾಷಾಪರಿವೀಕ್ಷಣೆಯ ವಿಧಾನ' ಕುರಿತು ಅಧ್ಯಯನ ಮಾಡಿದರು.
1962ರಿಂದ 65ರವರೆಗೆ ಪುಣೆ ವಿವಿದಿಂದ 'ದ್ರಾವಿಡಿಯನ್ ಭಾಷಾಶಾಸ್ತ್ರ'ದ ಅಧ್ಯಯನ,
1965ರಿಂದ 79ರವರೆಗೆ ಪುಣೆ ಡೆಕ್ಕನ್ ಕಾಲೇಜಿನಲ್ಲಿ 'ಟಿಬೆಟ್ ಬರ್ಬನ್' ಭಾಷೆಗಳ ರೀಡರ್ ಆಗಿ ಸೇವೆ ಸಲ್ಲಿಸಿದರು. 1979ರಿಂದ 85ರ ವರೆಗೆ 'ತಿರುವನಂತಪುರ ISDL'ನಲ್ಲಿ ಭಾಷಾ ಅಧ್ಯಾಪಕರಾಗಿ, 1988ರಿಂದ 95ರವರೆಗೆ ಮಣಿಪುರದ ಇಂಪಾಲ್ ವಿವಿಯಲ್ಲಿ ಭಾಷಾ ಪ್ರಾಧ್ಯಾಪಕರಾಗಿ ಹಾಗು ಮೈಸೂರಿನ ಸಿಐಎಲ್ ನಲ್ಲಿ ಯುಜಿಸಿ ವತಿಯಿಂದ ನಿಯೋಜಿತ 'ಪ್ರಖ್ಯಾತ ವಿಜ್ಙಾನಿ'ಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಸ್ಟಾನ್ ಫರ್ಡ್ ವಿವಿಯಲ್ಲಿ ಭಾಷಾಶಾಸ್ತ್ರಗಳ ಕುರಿತಂತೆ ಯೋಜನೆಗಳ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಬೆಲ್ಜಿಯಂನ ಆಂಟ್ ವರ್ಪ್ ವಿವಿಯಲ್ಲಿ ಹಾಗು ಆಸ್ಟ್ರೇಲಿಯದ ಮೆಲ್ಬೊರ್ನ್ ನಗರದ LAW BROBE ವಿವಿಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2002ರಲ್ಲಿ ಜರ್ಮನಿಯ ಲೀಪ್ಝಿನ್ ನಗರದ MAXPLANC INSTITUTEನಲ್ಲಿ ಅತಿಥಿ ವಿಜ್ಙಾನಿಯಾಗಿ ಸೇವೆಸಲ್ಲಿಸಿದ್ದಾರೆ.
ಇಷ್ಟೆಲ್ಲ ಅವಕಾಶಗಳ ಮಧ್ಯೆಯೂ ತೀರಾ ಹಿಂದುಳಿದ ಅಳಿವಿನಂಚಿನಲ್ಲಿರುವ ಕೊರಗ ಬುಡಕಟ್ಟು ಭಾಷೆಯ ಕುರಿತಾಗಿಯೂ ಅಭ್ಯಸಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಪ್ರಸ್ತುತ ಅವರು ನಿರ್ವತ್ತಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪರವಾಗಿ ಅವರಿಗೊಂದು ಅಭಿನಂದನೆಗಳು.
(ಅವರು ಸಂಗ್ರಹಿಸಿದ - ಕೊರಗ ಭಾಷೆಯಲ್ಲಿರುವ ಒಂದು ಆಡು ಮಾತಿನ ಕತೆಯನ್ನು ಇಲ್ಲಿ, ನಿಮಗಾಗಿ ದಾಖಲಿಸಿದ್ದೇವೆ.)
- ಹೃದಯ