Pages

Tuesday 18 February 2014

ಮೆರವಣಿಗೆಗಳಲ್ಲಿ ಕೊರಗರ ಡೋಲು ಮುಂದೆ (?!) ಯಾಕೆ?


ಹಿಂದಿನ ಕಾಲದಲ್ಲಿ ಊರಿನ ಮಾರಿ ಓಡಿಸುವಾಗ, ಕೋಲ - ನೇಮದ ಭಂಡಾರ ಹೋಗುವಾಗ ಅಥವಾ ಇನ್ನಾವುದೇ ಮೆರವಣಿಗೆಯಲ್ಲಿ ಡೊಳ್ಳಿನ ಕೊರಗರು ಮುಂದಿನ ಸಾಲಿನಲ್ಲಿ ಸುಮಾರು ದೂರದಲ್ಲಿ ಹೋಗಬೇಕಿತ್ತು. ಉಳಿದ ವಾದ್ಯದವರು ಮತ್ತು ಗುತ್ತು- ಬರ್ಕೆಯ ಉತ್ತಮರು ತುಂಬಾ ಹಿಂದಿನಿಂದ ನಿಧಾನವಾಗಿ ಗತ್ತು ಗಾಂಭೀರ್ಯತೆಯಿಂದ ಬರುತ್ತಿದ್ದರು!

ಇಲ್ಲಿ ಮಾತ್ರ ಕೊರಗರು ಮುಂದೆ ಯಾಕೆ..?!
ಶೋಷಣೆಯ ಕಟ್ಟಕಡೆಗೆ ತಳ್ಳಲ್ಪಟ್ಟ ಈ ಕೊರಗ ಸಮುದಾಯ ಆ ಒಂದು ವಿಚಾರದಲ್ಲಿ ಭಾರೀ ಮರ್ಯಾದೆ ಪಡೆಯುತ್ತಿತ್ತೆಂದು ತಿಳಿಯಬೇಡಿ!
ಕಾರಣವಿಷ್ಠೇ, ಅಂದಿನ ಕಾಲದಲ್ಲಿ ಕಾಲು ದಾರಿಗಳು ಬಹಳ ದುರ್ಗಮವಾಗಿತ್ತು. ದಟ್ಟ ಕಾಡಿತ್ತು! ಹಳ್ಳ ಕೊಳ್ಳದ ಮಧ್ಯೆ ಹಾದು ಹೋಗಬೇಕಾದರೆ ಆಳ ಅರಿವು ಗೊತ್ತಿರಲ್ಲಿಲ್ಲ. ಒಟ್ಟಾರೆಯಾಗಿ ದುರ್ಗಮ ದಾರಿ ಬಹಳ ಅಪಾಯಕಾರಿಯಾಗಿತ್ತು. ಕಾಡಿನ ಕ್ರೂರ ಮೃಗಗಳು ಹಸಿವೆಗಾಗಿ ಮನುಷ್ಯರ ಮೇಲೆ ದಾಳಿಯಿಟ್ಟರೆ, ಅದು ಕೊರಗರನ್ನು ತಿನ್ನಲಿ. ಏನಾದರೂ ಅನಾಹುತವಾದರೆ - ಅದು ಕೊರಗರಿಗೇ ಆಗಲಿ, ನಮಗೆ ಏನೂ ಆಗಬಾರದು ಎನ್ನುವ ದುರಾಲೋಚನೆ ಮತ್ತು ದೂರಾಲೋಚನೆ ಅಂದಿನ ಉತ್ತಮರಿಗಿತ್ತು!!
- ಹೃದಯ
 — with Apoorva Rao.

Saturday 15 February 2014

ಕೊರಗ ತನಿಯನ ಕೋಲಿನ ಮಹತ್ವ...

‘ಕೋಲು ಹಿಡಿದವರೆಲ್ಲಾ ಅಜ್ಜರಲ್ಲ!’ ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ... ಕೊರಗ ಜನಾಂಗದ ಕುಲ ಪುರುಷ - ತನಿಯನ ಕಾಲ ನಂತರ (ಬ್ರಾಹ್ಮಣರಿಂದ ನಡೆದ ವ್ಯವಸ್ಥಾ ಬದ್ಧವಾದ ಕೊಲೆ), ಆತನನ್ನು ಕೊರಗ ಸಮುದಾಯದ ಹಿರಿಯರು- ದೈವತ್ವಕ್ಕೇರಿಸಿ ಕುಲಪುರುಷನೆಂದು ಆರಾಧಿಸಲಾರಂಭಿಸಿದರು. ಮರದಡಿಯಲ್ಲಿ ಕಲ್ಲನಿಟ್ಟು ಪೂಜಿಸಲಾರಂಭಿಸಿದರು. ಕಲ್ಲಿನ ಮೇಲೆ ತನಿಯನಿಗೆ ಪ್ರಿಯವಾದ ಶೇಂಧಿಯನ್ನು ಇಡಲಾರಂಭಿಸಿದರು. ಅಲ್ಲೊಂದು ಕೋಲು ಇಟ್ಟರು. ಯಾಕೆಂದರೆ, ಕೊರಗ ಸಮುದಾಯದ ತನಿಯನಿಗೆ ‘ಆಮೆ - ಬೇಟೆ’ಯಾಡುವ ಹವ್ಯಾಸವಿತ್ತು. ಆತ ಹೋದಲೆಲ್ಲಾ ಕೋಲು ಹಿಡಿದುಕೊಂಡು ಹೋಗುತ್ತಿದ್ದ. ಆಮೆ ಹುಡುಕಬೇಕಾದರೆ ‘ಕೋಲು’ ಬೇಕೇ ಬೇಕು. ಕೋಲು ಇಲ್ಲದಿದ್ದರೆ ಆಮೆ ಬೇಟೆಯಾಡಲು ಸಾಧ್ಯವಿಲ್ಲ. ಹಾಗಾಗಿ, ತನಿಯನನ್ನು ಪ್ರತಿಸ್ಟಾಪಿಸಿದಲೆಲ್ಲಾ ಕೋಲು ಇಡುತ್ತಿದ್ದರು - ಕೊರಗ ಸಮುದಾಯದ ಬಾಂಧವರು. ಆದರೆ, ಯಾವಾಗ ಇತರ ಸಮುದಾಯದವರು ಕೊರಗರ ‘ತನಿಯ’ನನ್ನು ಪೂಜಿಸಲು ಆರಂಭಿಸಿದರೋ, ಅವರಿಗೆ ಕೋಲಿನ ಮಹತ್ವ ತಿಳಿಯಲಿಲ್ಲ. ಯಾಕೆಂದರೆ, ಕರಾವಳಿಯಲ್ಲಿ ಕೊರಗರನ್ನು ಬಿಟ್ಟರೆ ಬೇರೆ ಯಾರೂ - ಆಮೆ ಬೇಟೆಯಾಡಿದವರಲ್ಲ. ಅವರೂ ತನಿಯನ ಕಲ್ಲಿನಲ್ಲಿ ಕೋಲನ್ನು ಇಟ್ಟು ‘ತನಿಯಜ್ಜ’ ಎಂದು ಬಿಟ್ಟರು, ಇತರರೂ ‘ಕೊರಗಜ್ಜ’ ಎಂದರು! ಆದರೆ ತನಿಯ ಕಾಲವಾದದ್ದು ತನ್ನ ಬರಿಯ ಹದಿನೆಂಟನೆ ವಯಸ್ಸಿನಲ್ಲಿ! ಆತನಿಗೆ ಕೋಲು ಬೇಕಾದದ್ದು ಆಮೆ ಬೇಟೆಯಾಡಲೇ ಹೊರತು ಆಧಾರಕ್ಕಲ್ಲ! ಆತ ಅಜ್ಜನಾಗಲೇ ಇಲ್ಲ. ಆದರೆ, ಇತರರು ಆತನನ್ನು ‘ಅಜ್ಜ’ನನ್ನಾಗಿ ಮಾಡಿಬಿಟ್ಟರು!
(ಇದೀಗ ಕೋಲಿನ ಬದಲು 'ಬೆಳ್ಳಿ ದಂಡು' ಇಟ್ಟು ಪೂಜಿಸುತ್ತಿದ್ದಾರೆ!)
- ಹೃದಯ



ಚಿತ್ರ : ಸಾಯಿರಾಜ್ ಜ್ಯೋತಿ


Friday 7 February 2014

ಬದುಕೆಂಬ ರಥದ ಸ್ವ-ಸಾರಥಿಗಳು...

ಕೊರಗರು ಮೂಲತಃ ಸ್ವಉದ್ಯೋಗಿಗಳು! ಕಾಡಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಬಿದಿರು - ಬಿಳಲುಗಳಿಂದ, ಬುಟ್ಟಿ ಮತ್ತಿತ್ತರ ಪರಿಕರಗಳನ್ನು ಮಾಡಿ, ಇತರರಿಗೆ ಮಾರಿ ಜೀವನ ಸಾಗಿಸುತ್ತದ್ದವರು. ಜೇನು ಮತ್ತು ವನಸ್ಪತಿಗಳು -ಆಹಾರದ ಮತ್ತು ಸ್ವಉದ್ಯೋಗದ ಮೂಲಗಳಾಗಿದ್ದವು. ಕಾಡಿನೊಳಗಿನ ಸ್ವಚ್ಛಂದ ಬದುಕು - ಜೀವನದ ಪಾಠವನ್ನು ಮತ್ತು ಸ್ವಉದ್ಯೋಗದ ನೆಲೆಯನ್ನು ಒದಗಿಸಿತ್ತು. ಕಾಡೆಂದರೆ ಬದುಕು, ಕಾಡೆಂದರೆ ನಾವು ಮತ್ತು ನಾವು ಕಾಡಿನ ಮಕ್ಕಳು ಎನ್ನುವುದೇ ಜೀವನದ ಸಿದ್ದಾಂತವಾಗಿತ್ತು.

ಕಾಲಚಕ್ರದ ಬದುಕಿನಲ್ಲಿ, ಬದಲಾವಣೆಯೆಂಬ ಗತಿಚಕ್ರವು ತಮಗರಿವಿಲ್ಲದಂತೆ ಪಥವನ್ನು ಬದಲಿಸಿದಾಗ, ಕೊರಗರು ಅನುಭೋಗದ ವಸ್ತುವಾಗಿಬಿಟ್ಟರು. ಅಜಲು ಪದ್ಧತಿಯೆಂಬ ದಾಸ್ಯದ ವ್ಯವಸ್ಥೆಯ ಸ್ಥಿತಿಗತಿಯೊಂದು ಕೊರಗರ ಸ್ವವಲಂಬನೆಯ ಬದುಕಿನ ಮೂಲ ಸೆಲೆಯನ್ನು ಕಸಿದುಬಿಟ್ಟತು. ಕೊರಗರು ಊರವರ ಚಾಕರಿಯನ್ನು ಕಡ್ಡಾಯವಾಗಿ ಮಾಡಬೇಕಾಯಿತು. ತಮ್ಮ ಸ್ವಉದ್ಯೋಗದ ಪರಿಕರಗಳಾದ ಬುಟ್ಟಿ ಮತ್ತಿತರ ವಸ್ತುಗಳನ್ನು, ಊರ ದನಿಗಳಿಗೆ ಉಚಿತವಾಗಿ ನೀಡಲೇಬೇಕಿತ್ತು. ಏಕೆಂದರೆ, ಅದು ಸೇವೆಯ ರೂಪದ ಊಳಿಗಮಾನ್ಯ ಎಂಬ ಕ್ರೂರ ವ್ಯವಸ್ಥೆಯಾಗಿತ್ತು. ಉಚಿತವಾಗಿ ಬುಟ್ಟಿ ಮತ್ತು ಕಾಡುಡ್ಪತ್ತಿಗಳನ್ನು ಕೊಡಬೇಕಾಗಿ ಬಂದಾಗ, ಹೊಟ್ಟೆಯ ಹಸಿವನ್ನು ನೀಗಿಸಲು - ಎಂಜಲನ್ನ ತಿನ್ನಬೇಕಾಗಿ ಬಂತು. ಕೊರಗರ ಸ್ವಉದ್ಯೋಗ ಕಣ್ಮರೆಯಾಗುತ್ತಾ, ದಾಸ್ಯದ ಬೇಗುದಿಯಲ್ಲಿ ಸಿಲುಕಬೇಕಾಯಿತು.

ಬದುಕು ನಿಂತ ನೀರಲ್ಲ! ಬದಲಾವಣೆಗಳಿಂದ ಕೂಡಿದ ಹರಿವ ನೀರಿನಂತೆ, ಸದಾ ತನ್ನ ಚಲನವಲನಗಳನ್ನು ಬದಲಿಸುತ್ತಾ, ವಿಸ್ತರಿಸುತ್ತಿರುತ್ತದೆ. ಕೊರಗರ 'ಬದಲಾವಣೆಯ ಹಿನ್ನಲೆ'ಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ..., ಪರಿವರ್ತನೆಯ ತಂಗಾಳಿ ಹಿತಾನುಭವದಂತೆ ಮೂಡತೊಡಗಿತು. ಸಂಘಟನೆ, ಶಿಕ್ಷಣ ಮತ್ತು ಕಲಿತುಕೊಂಡ ಬದುಕಿನ ಪಾಠ - ಹಲವಾರು ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಿತು. ಕೊರಗ ಬಂಧುಗಳು ಸಂಘಟನೆಯಿಂದಾಗಿ, ಸದಾ ಸಮುದಾಯದ ಹಿತಚಿಂತನೆಯನ್ನೇ ಮಾಡಲಾರಂಭಿಸಿದರು. ಸರಕಾರದೊಂದಿಗೆ ತಮ್ಮ ಹಕ್ಕುಗಳಿಗಾಗಿ ಮತ್ತು ಸ್ವಚ್ಛಂದ ಬದುಕಿಗಾಗಿ ಸೌಮ್ಯಸಂಘರ್ಷಕ್ಕಿಳಿದರು. 'ಅವಮಾನವೀಯ ಅಜಲು' ನಿಷೇದದಿಂದಗಿ ನಿಜವಾದ 'ಬದುಕಿನ ಸ್ವತಂತ್ರ್ಯ'ದ ಸವಿಯನ್ನು ಪಡೆದರು. ಆಶಾಜೀವಿಗಳಾಗಿ ಮತ್ತೆ ಸ್ವಉದ್ಯೋಗದ ಕನಸನ್ನು ಕಾಣಲಾರಂಭಿಸಿದರು.

ಕನಸು ಜೀವನದ ಪಥವನ್ನೇ ಬದಲಿಸುತ್ತದಂತೆ! ಹಿತಚಿಂತಕರ ಮಾತು, ಕೊರಗರ ಬದುಕಿನಲ್ಲಿಯೂ ಹಲವಾರು ಸ್ವಉದ್ಯೋಗಿ ಆಕಾಂಕ್ಷಿಗಳನ್ನು ಸೃಷ್ಠಿಸಿತು. ಕೊರಗರು ಪರರ ಸೇವೆ ಮಾಡುವವರಲ್ಲ, ಕೊರಗರೆಂದರೆ ಕೈಲಾಗದವರಲ್ಲ ಎಂಬುದನ್ನು ಸಾಧಿಸಲು ಮುಂದಾದರು. ಆ ಸಾಹಸಿಗರ ಸಾಲಿನಲ್ಲಿಂದು - ೨೦೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಮತ್ತು ಮಾಲಕರಿದ್ದಾರೆ. ಸ್ವಂತ ಲಾರಿ ಮತ್ತು ಕಾರುಗಳನ್ನು ಓಡಿಸುವವರಿದ್ದಾರೆ. ಟೈಲರ್ ಗಳಿದ್ದಾರೆ, ಡೋಬಿ ಅಂಗಡಿ ಮಾಲಕರಿದ್ದಾರೆ, ಮಲ್ಲಿಗೆ ಕೃಷಿಕರಿದ್ದಾರೆ, ಎಕರೆಗಟ್ಟಲೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡಿ 'ಪ್ರಗತಿಪರ ಕೃಷಿಕ' ಎಂದು ಬಿರುದನ್ನು ಪಡೆದವರೂ ಇದ್ದಾರೆ. ಅವರೆಲ್ಲರೂ - ತಾವು ಕೊರಗರು, 'ಕೊರಗುವುದು ನಮ್ಮ ಬದುಕಲ್ಲ' ಎನ್ನುವ ಸಂದೇಶವನ್ನು ಧನಿಕ ಮತ್ತು ಶೃಮಿಕ ವರ್ಗಕ್ಕೆ ಸಾರಿದವರು! ಬದುಕೆಂಬ ರಥದ ಸ್ವಸಾರಥಿಗಳಿವರು. ಕನಸು ಮತ್ತು ಕನಸು ನನಸು ಮಾಡುವ ಮನಸು - ಇವೆರಡರ ಫಲವೇ ಇದು! ಕನಸು ಸಾಕಾರಗೊಳಿಸಿದ ಆ ಸಧಕರಿಗಿದೋ ನನ್ನದೊಂದು ಪ್ರೀತಿಪೂರ್ವಕ ಅಕ್ಷರ ನಮನಗಳು...
- ಹೃದಯ

Monday 3 February 2014

ಕೊರಗರ ಕುರಿತು ಹೊರತಂದ ಅಧ್ಯಯನಶೀಲ ಕೃತಿಗಳು...

ಆದಿವಾಸಿ ಬುಡಕಟ್ಟು ಪಂಗಡಕ್ಕೆ ಸೇರಿದ ಕೊರಗ ಜನಾಂಗದ ಕುರಿತು, ಸ್ವಾತಂತ್ರ್ಯಪೂರ್ವದಿಂದಲೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು, ಸಂಶೋಧಕರು ಹಾಗು ಅಧ್ಯಯನಕಾರರು - ಆಳವಾದ ಅಧ್ಯಯನ ಮಾಡಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಆ ಕೃತಿಗಳನ್ನು ಮತ್ತು ಅದರ ಲೇಖಕರ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ

1) KORAGA - Census of India 1971 (a Scheduled tribe in Karnataka)
: Office of the Registrar Generel India, Ministry of Home Affairs New Delhi.

2) La Missione the Mangalore Numero Unico Pro Koragar
: Maggio (1910ರಲ್ಲಿ)

3) Castes and Tribes of India
: Edgur Thurston

4) My Rambles Through the Missions of the Diocese of Mangalore
: Very Rev. R. D. Sequeira

5) Among the Outcasts
: Fr. Emmanuel Banfi S J

6) Tribes of Mysore
: A.A.D Luiz, G S Vishva and Co, Krishna Building, Avenue Road, Bangalore 560002

7) The Tribes and Castes of Madras Presidency
: M. B. Sherring

8 ) India - Reference Annual
: Ministry of Information and Broadcasting, Government of India

9) Year Book
: S.K. Sachdeva, Competition Review Pvt. Ltd, New Delhi

10) The Koraga Language
: D. N. Shankar Bhat, Deccan College, Post Graduate Research Institute, Poona

11) Ashram Schools a Report
: Miss Celine Aranha

12) Koragas A Primitive Tribes of South India
: Lawrence D'Souza S.J, UNESCO Association of Colorado formely Steele Center UNESCO Denver, U S A

13) ಕೊರಗರು
: Amrutha Someswar, IBH Prakashana, Gandhinagara Bangalore - 560009

14) ಕೊರಗ (ಕೆಲವು ಹಾಡುಗಳು)
: Kayyar Kinhanna Rai, Perdala - 670551

15) ಕೊರಗ ಜನಾಂಗ
: Dr. Aravinda Malagathi, Dr. Wodeyar D Heggade, University of Mangalore

16) ಕೊರಗರು ಸಮಕಾಲೀನ ಸ್ಪದಂನೆ
: Dr. Gangadhara Daiwajna Hampi University

1875ರಲ್ಲಿ M. T. Wallhouse ಎಂಬ ಬ್ರಿಟೀಷ್ ಸಂಶೋಧಕ ಹಾಗು 1885 ಉಳ್ಳಾಳ ರಾಘವೇಂದ್ರ ರಾವ್ ಎಂಬವರು ಕೊರಗರ ಜನಸಂಖ್ಯೆ, ಸಂಸ್ಕ್ರತಿ, ಆಚಾರ ವಿಚಾರ ಮತ್ತು ಭಾಷೆಯ ಕುರಿತಾಗಿ ಸಮಗ್ರ ವರದಿ ತಯಾರಿಸಿ ಆಗಿನ ಮದ್ರಾಸ್ ಸರಕಾರಕ್ಕೆ ಸಲ್ಲಿಸಿದ್ದರು. ('Restless for Christ' ಅನ್ನೊ ವರದಿಯೂ ಮದ್ರಾಸ್ ಸರಕಾರಕ್ಕೆ ಸಲ್ಲಿಕೆಯಾಗಿತ್ತು.)
ಅಷ್ಟೇ ಅಲ್ಲದೆ, ನಮ್ಮವರೇ ಆದ - ಬಾಬು ಕೊರಗ ಪಾಂಗಾಲರು, ಅವಮಾನವೀಯ ಅಜಲು ಚಾಕರಿಯ ಸ್ವರೂಪವನನ್ನು ತೆರೆದಿಡುವ - 'ಅಜಲು ಒಂದು ವಿಶ್ಲೇಷನೆ' ಎನ್ನವ ಪುಸ್ತಕವನ್ನು ಹೊರತಂದಿದ್ದಾರೆ.


- ಹೃದಯ
 

Blogger news

Blogroll

About