Pages

Saturday 7 June 2014

KAVANA - ನಾಗರಿಕತೆ ಸಾಯಬೇಕು-

ಹಸಿರಾಗಬೇಕು ಈ ಕಾಡು..
ನನ್ನ ಮುತ್ತಾತರು ಹುಟ್ಟಿ ಬೆಳೆದು
ಬದುಕು ಸವೆಸಿದ ಈ ಕಾಡು..
ಆಧುನಿಕ ಮಾನವನ ಅಭಿವೃದ್ಧಿಯ ತೃಷೆಗೆ
ನಲುಗಿ ಹೋದ ನನ್ನವರ ಕಾಡು..

ರುದ್ರ ರಮಣೀಯ ದಟ್ಟ ಕಾಡುಗಳು ಹಸಿರಾಗಬೇಕು..
ಅವಿರಳವಾದ ತಂಪು ಮರಗಳು ಚೈತನ್ಯಯುತವಾಗಬೇಕು..
ತಂಪು ನೆರಳ ತೇಜೊವನ ಮೈದಳೆಯಬೇಕು..
ಹಸಿರು ಸಮೃದ್ಧದ ಕಾನನಧಾಮವಾಗಬೇಕು ಈ ಕಾಡು...

ಬೆಳೆಯಬೇಕು ಹಸಿರು.. ಕೊಡಲಿಗೂ ಜಾಗವಿಲ್ಲದಂತೆ - ನಂಜು ಬಳ್ಳಿಗಳು..
ನೆಲದೊಡಲ ಒಣ ಎಲೆಗಳು ಹಸಿರಾಗಬೇಕು - ಹುಲು ಮಾನವನ ಕಾಡ್ಗಿಚ್ಚ ಬೆಂಕಿಗೆ ಆಹುತಿಯಾಗದಂತೆ..
ಜಿಟಿ ಜಿಟಿ ವರ್ಷಧಾರೆ ವರುಷಧಾರೆಯಾಗಿ ಸುರಿಯಬೇಕು..

ಅಲ್ಲೊಂದು ಹರಿದ್ವರ್ಣವನ ನಿರ್ಮಾಣವಾಗಬೇಕು..
ಜಿಂಕೆ ನವಿಲುಗಳು ನಲಿಡಾಡಬೇಕು
ಹುಲಿ ಸಿಂಹಗಳು ಘರ್ಜಿಸಬೇಕು.. ಮಾನವ ಓಡಿ ಹೋಗುವಂತೆ ದೈತ್ಯ ಜೀವಿಗಳ ವಿಕಾಸನಹೊಂದಬೇಕು..

ಕಣಜದ ಹೆಜ್ಜೇನುಗಳ ಆಗರವಾಗಬೇಕು..
ವಿಷಕಾರಿ ಹಾವುಗಳ ಠಾವಾಗಬೇಕು ಈ ಕಾಡು..
ಹಕ್ಕಿಗಳ ಕಲರವ ಕರ್ಕಶವಾಗಬೇಕು ಮಾನವ ಹೆದರುವಂತೆ - ಆತನೊಳಗಿನ ನಿರ್ಭಯತೆ ಸಾಯುವಂತೆ..

ಕಾಡನ್ನು ನಾಡಾಗಿಸಿದ ಈ ನಾಗರಿಕತೆ ಸಾಯಲೇಬೇಕು..
ಆ ಹೆಣ ಗೊಬ್ಬರಗಳ ರಾಶಿಯ ಮೇಲೆ - ಕಾಡು ಜನರ ಹಸಿರು ನಾಗರಿಕತೆ ಹುಟ್ಟಬೇಕು..
ಈ ನೆಲ ಹಸಿರಾಗಬೇಕು..
ಹಸಿರು ಉಸಿರಾಗಬೇಕು..


- ಬಿ ಎಸ್ ಹೃದಯ

0 comments:

Post a Comment

 

Blogger news

Blogroll

About