Pages

Monday 31 March 2014

ಕಾಸರಗೋಡಿನಲ್ಲಿ 'ಕನ್ನಡ'ದ ಸಾಧಕಿ!

ಮಲಯಾಳ ಭಾಷೆಯ ತೀವ್ರ ಪ್ರಭಾವಕ್ಕೆ ಭಾಗಶಃ ಒಳಗಾಗಿರುವ, ಕರ್ನಾಟಕದ ಗಡಿನಾಡು ಕಾಸರಗೋಡುನಲ್ಲಿ ಕೊರಗ ಸಮುದಾಯದ ಯುವತಿಯೊಬ್ಬಳು ಕನ್ನಡದಲ್ಲಿಯೇ ಸ್ನಾತ್ತಕೋತ್ತರ ಪದವಿ ಪೂರೈಸಿ ಸಮುದಾಯಕ್ಕೆ ಕೀರ್ತಿ ತಂದಿದ್ದಾಳೆ.

ವರ್ಕಾಡಿ ಗ್ರಾಮ ಪಂಚಾಯತಿನ ಬೊಡ್ಡೋಡಿಯ ಕೂಲಿಕಾರ್ಮಿಕ ವೃತ್ತಿಯ ಶೇಖರ ಕೊರಗ ಮತ್ತು ತುಕ್ರು ಎಂಬವರ ಮಗಳಾಗಿರುವ ಮೀನಾಕ್ಷಿ ಕೊರಗ ಎಂಬವಳೇ ಈ ಸಾಧನೆಗೈದವಳು.

ಬೊಡ್ಡೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಈಕೆ ಹತ್ತಿರದ ಕೊಡ್ಲುಮೊಗರು ವಾಣಿವಿಜಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದರು. ಕನ್ಯಾನ ಕಾಲೇಜಿನಲ್ಲಿ ಪಿಯುಸಿ ಪಾಸಾದ ಮೀನಾಕ್ಷಿ, ಮಂಜೇಶ್ವರ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. 2012ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ ಪೂರೈಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆದಿವಾಸ ಕೊರಗ ಸಮುದಾಯದ ಸ್ನಾತ್ತಕೋತ್ತರ ಪದವಿ ಪೂರೈಸಿದ ಪ್ರಪ್ರಥಮ ಸಾಧಕಿಯಾಗಿ ಮೂಡಿ ಬಂದಿದ್ದಾರೆ.

ಇದೀಗ ಮೀಯಪದವಿನ ರತ್ನಾಕರ ಕೊರಗ ಎಂಬವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅಭಿನಂದನೆಗಳು ಮೀನಾಕ್ಷಿ ಬೊಡ್ಡೋಡಿಯರೆ...
- ಹೃದಯ

Friday 21 March 2014

ಕೊರಗರ ಶ್ರೀಮಂತಿಕೆ!

ವೈವಾಹಿಕ ಸಂಬಂಧಗಳು ಬಂದಾಗ, ಯಾವುದೇ ಮುಂದುವರಿಯುತ್ತಿರುವ ಅಥವಾ ಮುಂದುವರಿದಿರುವ ಜನಾಂಗಗಳು - 'ವರದಕ್ಷಿಣೆ'ಯ (ಬದಿ) ವಿಚಾರವನ್ನು ತಮ್ಮ ಹಮ್ಮು ಬಿಮ್ಮಗೆ ಸರಿಯಾಗಿಯೇ ಪ್ರತಿಪಾದಿಸುತ್ತದೆ, ಅದನ್ನು ತಮ್ಮ ಗತ್ತು ಗೈರತ್ತಿನ ಸಂಕೇತವಾಗಿ ತೋರ್ಪಡಿಸುತ್ತದೆ. ಆದರೆ, ಸಂಬಂಧದಲ್ಲಿ ಅತೀ ಶ್ರೀಮಂತಿಕೆಯನ್ನೇ ಮೇಲೈಸಿಕೊಂಡಿರುವ, ಸಾಮಾಜಿಕವಾಗಿ ಅತೀ ಹಿಂದುಳಿದಿರುವ - ಈ ಕೊರಗ ಸಮುದಾಯ ವೈವಾಹಿಕ ವಿಚಾರದಲ್ಲಿಯೂ, 'ಬದಿ'ಯನ್ನು ಬದಿಗಿರಿಸಿ ತನ್ನ ಹಿರಿಮೆಯನ್ನು ಇತರ ಶ್ರೀಮಂತ ಸಮುದಾಯ ನಾಚುವಂತೆ ಮೆರೆಯುತ್ತಿದೆ. (ಕೊರಗ ಸಮುದಾಯದಲ್ಲಿ ವರದಕ್ಷಿಣೆಯ ಪ್ರಸ್ತಾಪವೇ ಬರುವುದಿಲ್ಲ!) ಆಶ್ಚರ್ಯವಾದರೂ ನಿಜ!


- ಹೃದಯ

Monday 17 March 2014

ಕೊರಗರ ಕುಣಿತ ಮತ್ತು ಕೊರಗರೇತರರ ಕುಣಿತ!!


ಪ್ರತೀ ಬುಡಕಟ್ಟು ಪಂಗಡಗಳೂ ತಮ್ಮದೇ ಆದ ವೇಷಭೂಷಣ, ಭಾಷೆ, ಆಚಾರ ವಿಚಾರ, ಸಂಪ್ರದಾಯ ಮತ್ತು ಕುಣಿತಗಳಿಂದ ತಮ್ಮ ಅಸ್ಥಿತ್ವವನ್ನು ದಾಖಲಿಸಿಕೊಂಡು - ಉಳಿಸಿಕೊಂಡು ಬಂದಿದೆ. ತಮ್ಮ ಸಂಪ್ರದಾಯ ಬದ್ಧ ಕುಣಿತ ಮತ್ತು ಹಾಡುಗಳು ಇತರರಿಗೂ ಮಾದರಿಯಾಗುವಂತೆ ಅದನ್ನು ಪ್ರಸ್ತುತಪಡಿಸುತ್ತಿದೆ. ಈ ಕೊರಗ ಸಮುದಾಯವೂ ತಮ್ಮ ಪ್ರಾಚೀನ ಡೋಲಿನ ಟಕ್ಕು (ಹೊಡೆತ)ಗಳೊಂದಿಗೆ ತಮ್ಮ ಮೂಲದ ನೃತ್ಯ ಪ್ರಕಾರವನ್ನು ಸಮಾಜದ ಮುಂದೆ ಆಕರ್ಷನೀಯವಾಗಿ ಪ್ರದರ್ಶಿಸುತ್ತಿದೆ. ಹಲವಾರು ಕಲಾತಂಡಗಳು ಇದೀಗ ಅಸ್ಥಿತ್ವದಲ್ಲಿದ್ದು - ಹಲವಾರು ಕಡೆ ನೃತ್ಯ ಪ್ರದರ್ಶನಗಳನ್ನು ನೀಡಿದೆ. ಇದೊಂದು ಒಳ್ಳೆಯ ವಿಚಾರವೇ. ಆದರೆ, ಅದ್ಯಾವುದೂ ಆಧುನೀಕರಣಗೊಂಡಿಲ್ಲ. ಏಕೆಂದರೆ ಅದು ರಕ್ತದಲ್ಲಿ ಕರಗತಗೊಂಡಿದೆ.
ಆದರೆ, 'ಕೊರಗ ಕುಣಿತ' ಎಂದು ಪ್ರದರ್ಶಿಸುವ ಕೊರಗರೇತರರು ( ಕೊರಗರಲ್ಲದವರು) ಕುಣಿವ ನೃತ್ಯವಿದೆಯಲ್ಲಾ... ಅದೆಷ್ಟು ಆಧುನೀಕರಣಗೊಂಡಿದೆ ಎಂಬುದಕ್ಕಾಗಿ ಒಂದು ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಕಾಲೇಜೊಂದರ ವಿದ್ಯಾರ್ಥಿಗಳು 'ಕೊರಗ ಕುಣಿತ' ಅನ್ನೋ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದರು. ಈ ಕುಣಿತಗಾರರು ಮೈಗೆಲ್ಲಾ ಕಪ್ಪು ಬಣ್ಣ ಬಳಿದುಕೊಂಡು, ತಲೆಗೊಂದು ಅಡಿಕೆ ಹಾಲೆಯ ಶಿರಸ್ತ್ರಾಣವನ್ನು ಧರಿಸಿ (ತುಳುವಿನಲ್ಲಿ- ಮುಠ್ಠಾಲೆ ಎನ್ನುತ್ತಾರೆ) ಅಬ್ಬರದ ನಾಸಿಕ್ ಬ್ಯಾಂಡ್ ಗೆ ಕುಣಿಯುವುದು! ಕಳೆದ ಮೈಸೂರು ದಸರಾ ಮೆರವಣಿಗೆಯಲ್ಲಿಯೂ 'ಕೊರಗ ಕುಣಿತ' ಅನ್ನೋ ಇಂಥದ್ದೇ ನೃತ್ಯವನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಯೂ ಮೈಗೆಲ್ಲಾ ಕಪ್ಪು ಬಣ್ಣ ಬಳಿದು, ತಲೆಗೊಂದು ಮುಠ್ಠಾಲೆ ಧರಿಸಿ ನಾಸಿಕ್ ಬ್ಯಾಂಡ್ ಗೆ ಶಿವಮೊಗ್ಗದ ಜಿಲ್ಲೆಯ ತೀರ್ಥಹಳ್ಳಿಯ ತೆಂಕ್ ಬೈಲ್ - ನವರಸ ಕಲಾತಂಡದ ಸದಸ್ಯರು ಕುಣಿಯುತ್ತಿದ್ದರು. (ಆ ಚಿತ್ರವನ್ನು ನಾವು - 'ಕೊರಗೆರ್ನ ಅಳಿಪು ಒರಿಪು'ವಿನಲ್ಲಿ ಪ್ರಕಟಿಸಿದ್ದೆವು.) ಆದರೆ, ಇಲ್ಲಿರುವ ಚಿತ್ರವನ್ನೊಮ್ಮೆ ಸರಿಯಾಗಿ ನೋಡಿ... ಸಿನೇಮಾ ಹಾಡೊಂದಕ್ಕೆ ಮಾಡುವ ಟಪ್ಪಾಂಗುಚ್ಚಿ ಶೈಲಿಯಂತಿದೆ! ಎಡಗಡೆಯಲ್ಲಿ ನಾಸಿಕ್ ಬ್ಯಾಂಡ್ ಹೊಡೆಯುತ್ತಿದ್ದರೆ, ಬಲಗಡೆಯಲ್ಲಿ ಸೌಂಡ್ ಬಾಕ್ಸ್ ಇಡಲಾಗಿದೆ. ಇದನ್ನು 'ಕೊರಗ ಕುಣಿತ' ಎಂದು ನವಂಬರ್ 2, 2012ರಂದು Flickrನಲ್ಲಿ ದಾಖಲಿಸಲಾಗಿದೆ. ಇಲ್ಲಿರುವ 'ಆಧುನೀಕರಣದ' ವಿಷಯವೆಂದರೆ - ನಾಸಿಕ್ ಬ್ಯಾಂಡ್ ಅನ್ನೋ 'ಡಬ್ಬ'ದ ಅಬ್ಬರ! ಮತ್ತು ಅದಕ್ಕವರು ಕುಣಿವ ಶೈಲಿ!! ಇದನ್ನು ಆ 'ಆಧುನಿಕರು' - ಕೊರಗ ಕುಣಿತ ಎನ್ನುವುದು.. ಎಂದು ಕರೆಯುವುದು!!

ಇಲ್ಲಿ ನನಗಿರುವ ಜಿಜ್ಙಾಸೆ ಏನೆಂದ್ರೆ... ಕೊರಗ ಕುಣಿತ ಎನ್ನುವ ಇವರು, ಕೊರಗರ ಮರದ ಡೋಲು ಏಕೆ ಬಳಸಲ್ಲ? ಕೊರಗರು ಬಳಸುವ ಕೊಳಲನ್ನು ಏಕೆ ಉಪಯೋಗಿಸಲ್ಲ? ಅದಿರಲಿ, ಕೊರಗರ ಸಂಪ್ರದಾಯಕ ಶೈಲಿಯಲ್ಲಿಯೇ ಏಕೆ ಬ್ಯಾಂಡ್ ಬಡಿಯೊಲ್ಲ?! ಕೊರಗರ ಸಂಪ್ರದಾಯಕ ಶೈಲಿಯಲ್ಲಿಯೇ ಕುಣಿಯಬಾರದು ಯಾಕೆ? ಮೈಗೆಲ್ಲಾ ಕಪ್ಪು ಬಣ್ಣ ಬಳಿದು, ತಲೆ ಮೇಲೊಂದು ಮುಠ್ಠಾಲೆ ಇಟ್ಟು, ಆಧುನಿಕ ಶೈಲಿಯಲ್ಲಿ ಕುಣಿದ ತಕ್ಷಣ - ಅದು 'ಕೊರಗ ಕುಣಿತ' ಅಥವಾ 'ಕೊರಗರದ್ದೇ ಕುಣಿತ' ಹೇಗಾಗುತ್ತದೆ?! ಇದನ್ನು 'ವಿಕೃತ(ರ) ಕುಣಿತ' ಎನ್ನಬಾರದೇ?!



- ಹೃದಯ

Saturday 8 March 2014

ಕೊರಗನೊಬ್ಬನ ಆಕ್ರೋಶಿತ ನುಡಿ...

ಅಂದು ಪಂಚಾಯತಿನಲ್ಲಿ ಶೌಚಾಲಯಕ್ಕೆ ಸಂಬಂಧಿಸಿದ್ದ ಒಂದು ಸಭೆ ನಡೆಯುತ್ತಿತ್ತು. ಆಗ ಹಠತ್ತಾಗಿ ಕೊರಗರ ಹುಡುಗನೊಬ್ಬ ಒಳ ಬಂದು - 'ನಮಗೆ ಮಳೆಗಾಲದ ಒಳಗೆ ಮನೆ ಕಟ್ಟಿಸಿ ಕೊಡುತ್ತಿರೋ, ಇಲ್ಲವೋ? ಇಲ್ಲವಾದರೆ ಪಂಚಾಯಿತಿಯ ಅಂಗಳದಲ್ಲೇ ಬಿಡಾರ ಹೂಡುತ್ತೇವೆ..' ಎಂದನಾತ. ಎಲ್ಲರೂ ಒಮ್ಮೆಲೇ ಅವಕ್ಕಾದರು! ಕೊರಗರು ಹೆಚ್ಚಾಗಿ ಕಾಡಿನಲ್ಲೇ ಇದ್ದವರು, ಎಲ್ಲರಿಗೂ ತಗ್ಗಿ ಬಗ್ಗಿ ನಡೆಯುವುದು ಅವರ ಅಭ್ಯಾಸ. ಹೀಗಿರುವಾಗ ಒಬ್ಬ ಕೊರಗರ ಹುಡುಗ ಧೈರ್ಯವಾಗಿ ತನ್ನ ಹಕ್ಕನ್ನು ಕೇಳುವುದು, ಪ್ರತಿಭಟಿನೆಗೆ ಮನಸ್ಸಾದರೂ ಮಾಡುವುದು, ಅದಕ್ಕಾಗಿ ಗ್ರಾಮ ಪಂಚಾಯತಿಯನ್ನೇ ಆರಿಸಿಕೊಳ್ಳುವುದು, ವಿಕೇಂದ್ರಿಕರಣದ ಶಕ್ತಿಯಲ್ಲದೆ ಇನ್ನೇನು?!
(ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿನಲ್ಲಿ ನಡೆದ ಘಟನೆ)


-
ನಿಖಿಲ್ ಕೋಲ್ಪೆ (ಪತ್ರಕರ್ತರು),
ಜನಜಾಗೃತಿ ಸಮಿತಿ ನರಿಕೊಂಬು
 

Blogger news

Blogroll

About